ಕಾರ್ಕಳ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕೆರೆಕಟ್ಟೆ ಪ್ರದೇಶದಲ್ಲಿ ಇಬ್ಬರು ಕೃಷಿಕರ ಸಾವಿಗೆ ಕಾರಣವಾಗಿದ್ದ ಪುಂಡ ಕಾಡಾನೆಯನ್ನು ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿ ಸೆರೆಹಿಡಿದಿದೆ. ಕಳೆದ ಎರಡು ದಿನಗಳಿಂದ ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕಾರಿಗಳು ನಡೆಸುತ್ತಿದ್ದ ತೀವ್ರ ಕಾರ್ಯಾಚರಣೆಯ ನಂತರ, ಭಾನುವಾರ ಸಂಜೆ ಒಂಟಿ ಸಲಗವನ್ನು ಭಗವತಿ ನೇಚರ್ಕ್ಯಾಂಪ್ ಸಮೀಪದ ಅಡವಿಯಲ್ಲಿ ಸೆರೆಹಿಡಿಯಲಾಯಿತು. ಈ ಕಾಡಾನೆಯು ಇತ್ತೀಚೆಗೆ ಕೆರೆಕಟ್ಟೆ ಸಮೀಪದ ಕೆರೆಗದ್ದೆ ಪ್ರದೇಶದಲ್ಲಿ ಹರೀಶ್ ಶೆಟ್ಟಿ (44) ಮತ್ತು ಉಮೇಶ್ (48) ಎಂಬ ಇಬ್ಬರು ಕೃಷಿಕರ ಮೇಲೆ ದಾಳಿ ನಡೆಸಿ ಅವರನ್ನು ಬಲಿ ಪಡೆದಿತ್ತು. ಈ ಘಟನೆಯ ನಂತರ ಸ್ಥಳೀಯರು ಪ್ರತಿಭಟನೆ ನಡೆಸಿ ಆನೆಯನ್ನು ಸೆರೆಹಿಡಿಯುವಂತೆ ತೀವ್ರ ಒತ್ತಾಯ ಮಾಡಿದ್ದರು.
ಈ ಸವಾಲಿನ ಕಾರ್ಯಾಚರಣೆಯು ಮಂಗಳೂರು ಅರಣ್ಯ ವೃತ್ತ ಮತ್ತು ಕುದುರೆಮುಖ ವನ್ಯಜೀವಿ ವಿಭಾಗದ ನೇತೃತ್ವದಲ್ಲಿ ನಡೆಯಿತು. ಆನೆಯನ್ನು ಸೆರೆಹಿಡಿಯಲು ಶಿವಮೊಗ್ಗದ ಸಕ್ರೆಬೈಲು, ಕೊಡಗಿನ ದುಬಾರೆ ಮತ್ತು ನಾಗರಹೊಳೆಯ ಆನೆ ಶಿಬಿರಗಳಿಂದ ನುರಿತ ತಂಡಗಳು ಮತ್ತು ಐದು ತರಬೇತಿ ಪಡೆದ ಆನೆಗಳು ಸ್ಥಳಕ್ಕೆ ಆಗಮಿಸಿದ್ದವು. ಅಲ್ಲದೆ, ಡ್ರೋನ್ ಕ್ಯಾಮರಾಗಳ ಸಹಾಯದಿಂದ ಕುದುರೆಮುಖ ಬೆಟ್ಟ ಪ್ರದೇಶದಲ್ಲಿ ವ್ಯಾಪಕ ಹುಡುಕಾಟ ನಡೆಸಲಾಯಿತು. ಸುಮಾರು 50ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಭಾನುವಾರ ಬೆಳಗಿನ ಜಾವ ಭಗವತಿ ಕ್ಯಾಂಪ್ ಬಳಿ ಆನೆಯನ್ನು ಪತ್ತೆಹಚ್ಚಿ, ನಿಖರವಾದ ಯೋಜನೆ ಮತ್ತು ತಂಡದ ಸಮನ್ವಯದ ಮೂಲಕ ಸಂಜೆ ವೇಳೆಗೆ ಅದನ್ನು ಯಶಸ್ವಿಯಾಗಿ ಸೆರೆಹಿಡಿಯುವಲ್ಲಿ ಅಧಿಕಾರಿಗಳು ಸಫಲರಾದರು.
ಕಾಡಾನೆಯನ್ನು ಸೆರೆಹಿಡಿದ ನಂತರ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದು, ಅರಣ್ಯ ಇಲಾಖೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನೆಯ ದಾಳಿಯಿಂದ ಮೃತಪಟ್ಟಿದ್ದ ಕೃಷಿಕರ ಕುಟುಂಬಗಳಿಗೆ ಗರಿಷ್ಠ ಪರಿಹಾರ ನೀಡುವಂತೆ ಸ್ಥಳೀಯರು ಈ ಹಿಂದೆ ಆಗ್ರಹಿಸಿದ್ದರು. ಇತ್ತ, ಸೆರೆಹಿಡಿದ ಆನೆಗೆ ವೈದ್ಯಕೀಯ ತಂಡದಿಂದ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆನೆಯ ಆರೋಗ್ಯ ಮತ್ತು ಮನಸ್ಥಿತಿಯನ್ನು ಪರಿಶೀಲಿಸಿದ ನಂತರ ಅದನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಅರಣ್ಯ ಇಲಾಖೆ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
For Advertisement Contact:
Would you like to promote your business, service, or product on our sathyapatha news plus website?
https://sathyapathanewsplus.blogspot.com
Please contact for advertisements: 9880834166 / WhatsApp


0 Comments