ಜನಪ್ರಿಯ ಗಾಯಕ ಜುಬೀನ್ ಗಾರ್ಗ್ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ಗುವಾಹಟಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಿವರವಾದ ಆರೋಪಪಟ್ಟಿಯನ್ನು ಸಲ್ಲಿಸಿದೆ. 3,500 ಪುಟಗಳಿಗೂ ಹೆಚ್ಚು ಇರುವ ಈ ದಾಖಲೆಯನ್ನು ನ್ಯಾಯಾಲಯಕ್ಕೆ ತರಲು, ಒಂಬತ್ತು ಸದಸ್ಯರ ಎಸ್ಐಟಿ ತಂಡವು ನಾಲ್ಕು ದೊಡ್ಡ ಟ್ರಂಕ್ಗಳಲ್ಲಿ ಸಾಕ್ಷ್ಯಗಳನ್ನು ಹೊತ್ತು ಆರು ವಾಹನಗಳ ಬೆಂಗಾವಲು ಪಡೆಯಲ್ಲಿ ಆಗಮಿಸಿದ್ದು ವಿಶೇಷವಾಗಿತ್ತು.
ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಗಾರ್ಗ್ ನಿಧನರಾದ ನಂತರ, ಅಸ್ಸಾಂ ಸರ್ಕಾರವು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶೇಷ ಡಿಜಿಪಿ ಎಂಪಿ ಗುಪ್ತಾ ನೇತೃತ್ವದಲ್ಲಿ ಎಸ್ಐಟಿ ತನಿಖೆಗೆ ಆದೇಶಿಸಿತ್ತು. ತನಿಖೆಯ ಸಮಯದಲ್ಲಿ ತಂಡವು 300 ಕ್ಕೂ ಹೆಚ್ಚು ಸಾಕ್ಷಿಗಳನ್ನು ಪ್ರಶ್ನಿಸಿದ್ದು, ಉತ್ಸವದ ಮುಖ್ಯ ಸಂಘಟಕ ಶ್ಯಾಮಕಾನು ಮಹಾಂತ ಸೇರಿದಂತೆ ಇದುವರೆಗೆ ಏಳು ಜನರನ್ನು ಬಂಧಿಸಲಾಗಿದೆ. ಈ ನಡುವೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಈ ಘಟನೆಯನ್ನು 'ಕೊಲೆ' ಎಂದು ಹೇಳಿದ್ದರು.
ಗಾಯಕ ಜುಬೀನ್ ಗಾರ್ಗ್ ಅವರು 4ನೇ ಈಶಾನ್ಯ ಭಾರತ ಉತ್ಸವದಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ಭೇಟಿ ನೀಡಿದ್ದಾಗ ಸಮುದ್ರದಲ್ಲಿ ಈಜುತ್ತಿದ್ದಾಗ ಮೃತಪಟ್ಟಿದ್ದರು. ಸದ್ಯ ಸಿಂಗಾಪುರದ ಅಧಿಕಾರಿಗಳು ಕೂಡ ತಮ್ಮದೇ ಆದ ತನಿಖೆ ನಡೆಸುತ್ತಿದ್ದಾರೆ, ಆದರೆ ಅವರ ಆರಂಭಿಕ ತನಿಖೆಗಳು ಯಾವುದೇ ಅಕ್ರಮವನ್ನು ಸೂಚಿಸುವುದಿಲ್ಲ ಎಂದು ಹೇಳಿವೆ. ಸಿಂಗಾಪುರ ಪೊಲೀಸ್ ಪಡೆ ತಮ್ಮ ತನಿಖೆ ಇನ್ನೂ ಮೂರು ತಿಂಗಳವರೆಗೆ ಮುಂದುವರಿಯಬಹುದು ಎಂದು ತಿಳಿಸಿದೆ. ಈ ನಡುವೆ, ಅಸ್ಸಾಂನ ಕಾಟನ್ ವಿಶ್ವವಿದ್ಯಾಲಯವು ಐಕಾನ್ ಗಾಯಕ ಜುಬೀನ್ ಗಾರ್ಗ್ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

0 Comments