⭕ಗೌರಿ ಹಬ್ಬ: ಸಂಪ್ರದಾಯ, ನಂಬಿಕೆ ಮತ್ತು ಬಾಗಿನ ಸಂಸ್ಕೃತಿ🔴"

Gouri

 ಭಾರತೀಯ ಸಂಸ್ಕೃತಿ ವಿಶ್ವದಲ್ಲಿ ಅತಿ ವೈವಿಧ್ಯಮಯ ಸಂಸ್ಕೃತಿಗಳಲ್ಲಿ ಒಂದು. ಇಲ್ಲಿ ಹಬ್ಬಗಳಿಗೆ ಅಪಾರವಾದ ಮಹತ್ವವಿದೆ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಧಾರ್ಮಿಕ ಹಾಗೂ ಸಾಮಾಜಿಕ ಸಂದೇಶವನ್ನು ನೀಡುತ್ತದೆ. ಅಂತಹ ವಿಶಿಷ್ಟ ಹಬ್ಬಗಳಲ್ಲಿ ಗೌರಿ ಹಬ್ಬ ಪ್ರಮುಖ ಸ್ಥಾನವನ್ನು ಪಡೆದಿದೆ.

ಗೌರಿ ಹಬ್ಬವನ್ನು ಪ್ರತಿವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ, ಅಂದರೆ ಭಾದ್ರಪದ ಶುದ್ಧ ತದಿಗೆ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿಶೇಷವಾಗಿ ಮುತ್ತೈದೆಯರು ಸಕಲ ಸೌಭಾಗ್ಯಕ್ಕಾಗಿ ಆಚರಿಸುತ್ತಾರೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇತರ ಭಾಗಗಳಲ್ಲಿ ಸರಳವಾದರೂ ಭಕ್ತಿಯಿಂದ ಆಚರಿಸುವ ಪದ್ಧತಿ ಇದೆ.

ಚಂದ್ರಪ್ರಭ ಎನ್ನುವ ಅರಸನು ಭೇಟೆಯಾಡಲು ಅರಣ್ಯಕ್ಕೆ ಹೋದಾಗ ಅಲ್ಲಿ ಒಂದು ಸುಂದರವಾದ ನೈಸರ್ಗಿಕ ಸಂಪತ್ತುಳ್ಳ ಸರೋವರದ ಬಳಿ ಅನೇಕ ಅಪ್ಸರೆಯರು ಸ್ವರ್ಣಗೌರಿ ಪೂಜೆಯನ್ನು ಮಾಡುವುದರಲ್ಲಿ ನಿರತರಾಗಿರುವುದನ್ನು ಕಾಣುತ್ತಾನೆ.

ಪೂಜೆಯ ನಂತರ ಪೂಜೆಯ ಮಹತ್ವದ ಬಗ್ಗೆ ತಮಗೆ ತಿಳಿಸಬೇಕು ಎಂದು ಕೇಳುತ್ತಾನೆ. ಆ ಅಪ್ಸರೆಯರು ವ್ರತದ ಬಗ್ಗೆ ತಿಳಿಸುವರು. ಈ ವ್ರತವನ್ನು ಆಚರಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಇದನ್ನು ಭಾದ್ರಪದ ಶುದ್ಧ ತದಿಗೆ ದಿನ ಆಚರಿಸಬೇಕೆಂದು ತಿಳಿಸಿ 16 ಗಂಟು ಹಾಕಿದ ದಾರವನ್ನು ಕೊಡುತ್ತಾರೆ.

ರಾಜನು ಅರಮನೆಗೆ ಬಂದ ನಂತರ ತನ್ನ ಇಬ್ಬರು ಪತ್ನಿಯರಿಗೆ ಆ ದಾರವನ್ನು ಕೊಡಲು, ಮೊದಲನೆ ಪತ್ನಿ ಆ ದಾರವನ್ನು ತಿರಸ್ಕರಿಸಿ ಒಣಗಿದ ಗಿಡದ ಮೇಲೆ ಎಸೆದಳು. ಆ ಗಿಡವು ದಾರದ ಮಹಿಮೆಯಿಂದ ತಕ್ಷಣ ಚಿಗುರಿ ಬೆಳೆಯತೊಡಗಿತು. ಅದನ್ನು ಕಂಡ ಕಿರಿಯ ಪತ್ನಿಯು ಆ ದಾರವನ್ನು ಧರಿಸಿ ರಾಜನು ಹೇಳಿದ ಕ್ರಮದಲ್ಲಿ ಸ್ವರ್ಣಗೌರಿ ವ್ರತವನ್ನು ಆಚರಿಸಿದಳು.

ನಂತರ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿ ಸತಿಪತಿಯರು ಶಿವಲೋಕವನ್ನು ಹೊಂದಿ ಮುಕ್ತಿಯನ್ನು ಪಡೆದರೆಂಬ ಪ್ರತೀತಿ ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ. ಈ ಸ್ವರ್ಣಗೌರಿ ಹಬ್ಬದಲ್ಲಿ ಬಾಗಿನ ಕೊಡುವುದು ಒಂದು ವಿಶೇಷ. ಅಂದರೆ ಗೌರವಪೂರ್ಣವಾಗಿ ಕೊಡುವ ದಾನ ಅಥವಾ ಸತ್ಕಾರವೆಂದು ಕರೆಯುತ್ತಾರೆ.

ಗೌರಿ ಹಬ್ಬದಲ್ಲಿ ಬಾಗಿನ ಕೊಡುವುದು ಒಂದು ವಿಶೇಷ ಪದ್ಧತಿ. ಸಹೋದರನು ಅಕ್ಕ-ತಂಗಿಯರಿಗೆ ಗೌರವದಿಂದ ಬಾಗಿನ ನೀಡುತ್ತಾನೆ. ಬಾಗಿನದಲ್ಲಿ ಬಿದಿರಿನ ಮೊರ, ಬಾಳೆ ಎಲೆ, ವಿಳ್ಯದೆಲೆ, ಅಡಿಕೆ, ಅರಿಶಿನ ಕುಂಕುಮ, ಗಾಜಿನ ಬಳೆ, ಬೇಳೆ-ಧಾನ್ಯಗಳು, ಹಣ್ಣು-ತರಕಾರಿ, ತೆಂಗಿನಕಾಯಿ ಮುಂತಾದವುಗಳನ್ನು ಇಡಲಾಗುತ್ತದೆ. ಈ ಮೂಲಕ ಪರಸ್ಪರ ಗೌರವ, ಪ್ರೀತಿ ಮತ್ತು ಬಾಂಧವ್ಯ ಬಲಗೊಳ್ಳುತ್ತದೆ.

ಮುತ್ತೈದೆಯರು ಈ ವ್ರತವನ್ನು ಮಾಡಿದರೆ ಸಂತಾನ ಹಾಗೂ ಸಕಲ ಸೌಭಾಗ್ಯ ದೊರೆಯುತ್ತದೆ.

ಅವಿವಾಹಿತರಿಗೆ ವಿವಾಹಯೋಗ ಪ್ರಾಪ್ತಿಯಾಗುತ್ತದೆ.

ವಿದ್ಯಾರ್ಥಿಗಳಿಗೆ ಜ್ಞಾನ ಹಾಗೂ ವಿದ್ಯಾಭ್ಯಾಸದಲ್ಲಿ ಯಶಸ್ಸು ದೊರೆಯುತ್ತದೆ.

ಹೀಗೆ, ಗೌರಿ ಹಬ್ಬವು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಕುಟುಂಬದ ಬಾಂಧವ್ಯ, ಸಹೋದರ-ಸಹೋದರಿಯರ ಪ್ರೀತಿ, ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಸೌಹಾರ್ದತೆಯನ್ನು ಬೆಳೆಸುವ ಹಬ್ಬವಾಗಿದೆ. ಜನರು ಭಕ್ತಿಯಿಂದ ಹಾಗೂ ನಿಷ್ಠೆಯಿಂದ ಈ ಹಬ್ಬವನ್ನು ಆಚರಿಸಿದರೆ ಜೀವನದಲ್ಲಿ ಸುಖ-ಸಮೃದ್ಧಿ, ಸಂತಾನ, ಐಶ್ವರ್ಯ ಹಾಗೂ ಶಾಂತಿ ದೊರೆಯುತ್ತದೆ ಎಂಬುದು ಪುರಾಣಗಳ ನಂಬಿಕೆ.

             ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು

 

                                                                  -ಸಂಗ್ರಹ

Post a Comment

0 Comments