“ಸೆಪ್ಟೆಂಬರ್ 7, 2025 ರಂದು ಖಗ್ರಾಸ ಚಂದ್ರಗ್ರಹಣ ಗೋಚರಿಸಲಿದೆ”

Chandragrha

 

ಭಾರತದಲ್ಲಿ ಸೆಪ್ಟೆಂಬರ್ 7, 2025 ರಂದು ರಾತ್ರಿ ಅಪರೂಪದ ರಕ್ತ ಚಂದ್ರಗ್ರಹಣ ಗೋಚರಿಸಲಿದ್ದು, ಖಗೋಳಶಾಸ್ತ್ರ ಪ್ರಿಯರು ಹಾಗೂ ಸಾರ್ವಜನಿಕರಿಗೆ ಇದು ಅದ್ಭುತ ವೀಕ್ಷಣೆಯ ಸಂದರ್ಭವಾಗಲಿದೆ. ಈ ವೇಳೆ ಚಂದ್ರನು ಕೆಂಪು ಬಣ್ಣ ತಾಳುವುದರಿಂದ ಇದನ್ನು “ರಕ್ತ ಚಂದ್ರ” ಎಂದೂ ಕರೆಯಲಾಗುತ್ತದೆ.

ಭಾರತೀಯ ಖಗೋಳ ಸಂಶೋಧನಾ ಕೇಂದ್ರದ ಪ್ರಕಾರ, ಗ್ರಹಣವು ರಾತ್ರಿ 9:57 ಕ್ಕೆ ಆರಂಭವಾಗಲಿದ್ದು, ಮೊದಲು ಭಾಗಿಕ ಚಂದ್ರಗ್ರಹಣ ಗೋಚರಿಸುತ್ತದೆ. ನಂತರ 11:01 ಕ್ಕೆ ಸಂಪೂರ್ಣ ಗ್ರಹಣ ಪ್ರಾರಂಭವಾಗಿ, ಮಧ್ಯರಾತ್ರಿ 12:23 ಕ್ಕೆ ಪರಾಕಾಷ್ಠೆಗೆ ತಲುಪುತ್ತದೆ. ಬೆಳಗಿನ 2:25 ಕ್ಕೆ ಚಂದ್ರನು ನೆರಳಿನಿಂದ ಸಂಪೂರ್ಣವಾಗಿ ಹೊರಬಂದು ಗ್ರಹಣ ಮುಕ್ತವಾಗುತ್ತದೆ. ಒಟ್ಟಾರೆ 4 ಗಂಟೆಗಳ ಕಾಲ ಈ ಅದ್ಭುತ ಪ್ರಕೃತಿ ವೈಜ್ಞಾನಿಕ ಘಟನೆ ಕಾಣಸಿಗಲಿದೆ.


ರಕ್ತ ಚಂದ್ರಗ್ರಹಣ ಹೇಗೆ ಉಂಟಾಗುತ್ತದೆ?

ಚಂದ್ರಗ್ರಹಣವು ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ನಿಖರವಾಗಿ ಬಂದಾಗ ಸಂಭವಿಸುತ್ತದೆ. ಈ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಕೆಲಕಾಲ ಅದು ಮರೆಮಾಡಲ್ಪಡುತ್ತದೆ. ಭೂಮಿಯನೆರಳಿನಲ್ಲಿ ಎರಡು ಭಾಗಗಳಿರುತ್ತವೆ. ಒಳಗಿನ ಗಾಢ ಕತ್ತಲೆಯ ಭಾಗವನ್ನು 'ಅಂಬ್ರಾ' ಎಂದು ಕರೆಯಲಾಗುತ್ತದೆ; ಹೊರಗಿನ ಮಬ್ಬಾದ ಭಾಗವನ್ನು 'ಪೆನಂಬ್ರಾ' ಎಂದು ಕರೆಯಲಾಗುತ್ತದೆ. ಚಂದ್ರನು ಅಂಬ್ರಾ ನೆರಳಿನೊಳಗೆ ಪ್ರವೇಶಿಸುವಾಗ ಅಥವಾ ಅದನ್ನು ತೊರೆಯುವಾಗ, ನಾವು ಪಾರ್ಶ್ವ ಚಂದ್ರಗ್ರಹಣವನ್ನು ಬರಿಗಣ್ಣಿನ ಮೂಲಕ ಸುಲಭವಾಗಿ ಗಮನಿಸಬಹುದು. ಚಂದ್ರನು ಸಂಪೂರ್ಣವಾಗಿ ಅಂಬ್ರಾ ನೆರಳಿನೊಳಗೆ ಪ್ರವೇಶಿಸಿದಾಗ, ಸಂಪೂರ್ಣ ಗ್ರಹಣವಾಗಿ ಚಂದ್ರ ತಾಮ್ರವರ್ಣದ ಅಥವಾ ಗಾಢ ಕೆಂಪು ಬಣ್ಣದಲ್ಲಿ ಕಾಣಿಸುಕೊಳ್ಳುತ್ತದೆ. ಪೆನಂಬ್ರಾ ನೆರಳಿನೊಳಗೆ ಚಂದ್ರ ಇರುವಾಗ, ಅದರ ಪ್ರಕಾಶದಲ್ಲಿ ಸ್ವಲ್ಪ ಕಡಿಮೆಯಾದರೂ ಅದನ್ನು ಬರಿಗಣ್ಣಿನಿಂದ ಗುರುತಿಸುವುದು ಕಷ್ಟವಾಗುತ್ತದೆ


ಸೆಪ್ಟೆಂಬರ್ 7ರಂದು ರಾತ್ರಿ 9:57 ಕ್ಕೆ ಚಂದ್ರನು, ಭೂಮಿಯ ಗಾಢ ನೆರಳಾದ ಅಂಬ್ರಾ ಒಳಗೆ ಪ್ರವೇಶಿಸಲು ಆರಂಭಿಸುತ್ತದೆ, ಇದು ಪಾರ್ಶ್ವ ಚಂದ್ರಗ್ರಹಣದ ಆರಂಭ. ನಂತರ ಚಂದ್ರನ ಹೆಚ್ಚಿನ ಭಾಗ ಭೂಮಿಯ ನೆರಳಿನಿಂದ ಆವರಿಸಲ್ಪಡುತ್ತಾ, 11:01 ಕ್ಕೆ ಅದು ಸಂಪೂರ್ಣವಾಗಿ ಅಂಬ್ರಾದೊಳಗೆ ಸೇರುತ್ತದೆ. ಸಂಪೂರ್ಣ ಚಂದ್ರಗ್ರಹಣವು 82 ನಿಮಿಷಗಳ ವರೆಗೆ, ಅಂದರೆ 12:23ರವರೆಗೆ, ಮುಂದುವರಿದು ಬಳಿಕ ಚಂದ್ರನು ನಿಧಾನವಾಗಿ ಅಂಬ್ರಾದಿಂದ ಹೊರಬರಲಾರಂಭಿಸಿ, ಈ ಪಾರ್ಶ್ವ ಹಂತವು 1:26ರ ವರೆಗೆ ಮುಂದುವರಿಯುತ್ತದೆ. ಪಾರ್ಶ್ವಛಾಯಾ ಹಂತವು ರಾತ್ರಿ 8:58ಕ್ಕೆ ಆರಂಭವಾಗಿ, ಬೆಳಗಿನ ಜಾವ 2:25ಕ್ಕೆ ಅಂತ್ಯಗೊಳ್ಳುತ್ತದೆ. ಈ ಸಂಪೂರ್ಣ ಚಂದ್ರಗ್ರಹಣವು ಗಾಢ ಕೆಂಪು ಅಥವಾ ತಾಮ್ರವರ್ಣದಲ್ಲಿ ಗೋಚರಿಸುತ್ತದೆ. ಇದಕ್ಕೆ ಕಾರಣವೆಂದರೆ, ಸೂರ್ಯನ ಬೆಳಕಿನ ಕೆಂಪು ಬಣ್ಣದ ಕಿರಣಗಳು ಭೂಮಿಯ ತೆಳುವಾದ ವಾತಾವರಣದ ಮೂಲಕ ಹಾದುಹೋಗಿ ಚಂದ್ರನ ಮೇಲೆ ತಲುಪುತ್ತವೆ. ನೀಲಿ ಬಣ್ಣದ ಕಿರಣಗಳು ಮಾತ್ರ ಭೂಮಿಯ ಹಗಲಿನ ಆಕಾಶದಲ್ಲಿ ಆಗುವಂತೆ ಚದುರಿಬಿಡುತ್ತವೆ.


ಬೆಂಗಳೂರು ಪ್ಲಾನೆಟೋರಿಯಂನ ಹಿರಿಯ ವಿಜ್ಞಾನಿ ಡಾ. ಕೃಷ್ಣಮೂರ್ತಿ ಅವರು, “ಇದು ವಿಜ್ಞಾನಕ್ಕೆ ಮಹತ್ವದ ಕ್ಷಣ. ಸಾರ್ವಜನಿಕರು ಯಾವುದೇ ಧಾರ್ಮಿಕ ಭ್ರಮೆಗೊಳಗಾಗಬಾರದು. ಚಂದ್ರಗ್ರಹಣವು ಶುದ್ಧ ಪ್ರಕೃತಿ ವೈಜ್ಞಾನಿಕ ಘಟನೆ. ಜನರು ಇದನ್ನು ಕಣ್ಣುಗಳಿಗೆ ಯಾವುದೇ ಅಪಾಯವಿಲ್ಲದೆ ಸ್ವಾಭಾವಿಕವಾಗಿ ವೀಕ್ಷಿಸಬಹುದು” ಎಂದು ತಿಳಿಸಿದ್ದಾರೆ.

ಈ ಘಟನೆಯನ್ನು ಕಣ್ಣುಂಬಿಕೊಳ್ಳುವ ಅಪೂರ್ವ ಅವಕಾಶ ಮಿಸ್ ಮಾಡಿಕೊಂಡ್ರೆ ಇನ್ನು ಮೂರು ವರ್ಷ ಕಾಯಬೇಕಾಗುತ್ತದೆ.







Post a Comment

0 Comments