ಮಂಗಳೂರು: ಕರಾವಳಿಯ ಯಕ್ಷಗಾನ ಕ್ಷೇತ್ರದಲ್ಲಿ ತನ್ನ ಸುಮಧುರ ಗಾಯನದಿಂದ “ರಸರಾಗ ಚಕ್ರವರ್ತಿ” ಎಂಬ ಖ್ಯಾತಿ ಪಡೆದ ಹಿರಿಯ ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ನಿಧನರಾಗಿದ್ದಾರೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲ ತಮ್ಮ ಕಂಚಿನ ಕಂಠದ ಮಧುರ ಗಾಯನ ಮತ್ತು ವಿಶಿಷ್ಟ ರಾಗ ಸಂಯೋಜನೆಯ ಮೂಲಕ ಯಕ್ಷಗಾನ ಪ್ರೇಕ್ಷಕರ ಮನಸ್ಸು ಗೆದ್ದ ಅಮ್ಮಣ್ಣಾಯರ ಅಗಲಿಕೆಯಿಂದ ಯಕ್ಷಗಾನ ಲೋಕಕ್ಕೆ ಅಪಾರ ನಷ್ಟವಾಗಿದೆ.
ದಾಮೋದರ ಮಂಡೆಚ್ಚರ ಗರಡಿಯಲ್ಲಿ ಪಳಗಿದ ಅವರು, ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಆರಂಭಿಸಿ ನಂತರ ಭಾಗವತಿಕೆಯತ್ತ ಮುಖಮಾಡಿದ್ದರು. ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡು ಅಗ್ರಮಾನ್ಯ ಭಾಗವತರ ಸಾಲಿನಲ್ಲಿ ಸ್ಥಾನ ಪಡೆದಿದ್ದರು.
ಪೌರಾಣಿಕ ಹಾಗೂ ತುಳು ಪ್ರಸಂಗಗಳೆರಡರಲ್ಲೂ ತಮ್ಮ ಗಾಯನದಿಂದ ಛಾಪು ಮೂಡಿಸಿದ ಅಮ್ಮಣ್ಣಾಯರು, ‘ಕಾಡಮಲ್ಲಿಗೆ’, ‘ಕಚೂರ ಮಾಲ್ಕಿ’, ‘ಪಟ್ಟದ ಪದ್ಮಲೆ’, ‘ಮಾನಿಷಾದ’ ಸೇರಿದಂತೆ ಅನೇಕ ಪ್ರಸಂಗಗಳನ್ನು ಜನಪ್ರಿಯಗೊಳಿಸಿದವರು. ವಿಶೇಷವಾಗಿ ‘ಸತ್ಯಹರಿಶ್ಚಂದ್ರ’ ಪ್ರಸಂಗದ ಅವರ ಹಾಡುಗಳು ಇಂದಿಗೂ ಯಕ್ಷಗಾನಾಭಿಮಾನಿಗಳ ನೆನಪಿನಲ್ಲಿ ಜೀವಂತವಾಗಿವೆ.
ಅವರ ಕಲಾ ಸೇವೆಯನ್ನು ಗುರುತಿಸಿ ಉಡುಪಿ ತುಳುಕೂಟವು ಅವರಿಗೆ ‘ಸಾಮಗ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಅನೇಕ ಪ್ರಮುಖ ಮೇಳಗಳಲ್ಲಿ ಪ್ರದರ್ಶನ ನೀಡಿದ ಅವರು ಇತ್ತೀಚಿನ ದಿನಗಳಲ್ಲಿ ಹವ್ಯಾಸಿ ಭಾಗವತರಾಗಿ ತಮ್ಮ ಕಲಾ ಸೇವೆ ಮುಂದುವರೆಸುತ್ತಿದ್ದರು.


0 Comments