ಆರ್ಎಸ್ಎಸ್ (RSS) ಏಳಿಗೆಯನ್ನು ಕೆಲವರು ಸಹಿಸುತ್ತಿಲ್ಲವಾದರೂ, ಸೂರ್ಯ ಮತ್ತು ಚಂದ್ರ ಇರುವ ತನಕ ಸಂಘಟನೆ ಇರುತ್ತದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ನಾಟಕ ಬಿಟ್ಟು ರಾಜ್ಯದ ಅಭಿವೃದ್ಧಿಯ ಕಡೆ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ:
"ಸಿದ್ದರಾಮಯ್ಯ ಸರ್ಕಾರಕ್ಕೆ ತಾವು ಏನು ಮಾಡುತ್ತಿದ್ದಾರೆ ಎಂಬ ಅರಿವೇ ಇಲ್ಲ. ಸಿಎಂ ಹಾಗೂ ಡಿಸಿಎಂ ಇಬ್ಬರೂ ಬೆಳಿಗ್ಗೆ ಎದ್ದು ನಾಟಕ ಮಾಡುವುದರಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆಗಳ ಕಡೆ ಗಮನ ಕೊಡಬೇಕಾದ ಸಮಯದಲ್ಲಿ ರಾಜಕೀಯ ಪ್ರದರ್ಶನದಲ್ಲಿ ಮುಳುಗಿದ್ದಾರೆ," ಎಂದು ಸೋಮಣ್ಣ ಟೀಕಿಸಿದರು.
ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಮಾತನಾಡಿದ ಅವರು, "ಎ-ಖಾತಾ, ಬಿ-ಖಾತಾ ಸಮಸ್ಯೆಗಳಿಗೆ ಪರಿಹಾರ ನಮ್ಮ ಕಾಲದಲ್ಲೇ ಮಾಡಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ನಾವು ದಾರಿ ತೋರಿಸಿದ್ದೇವೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರವು ಜನರನ್ನು ಸುಲಿಗೆ ಮಾಡುವ ಕ್ರಮಗಳನ್ನು ಮಾತ್ರ ಕೈಗೊಂಡಿದೆ," ಎಂದು ಆರೋಪಿಸಿದರು. ಬೆಂಗಳೂರಿನ ಜನರಿಂದ ಕಾಂಗ್ರೆಸ್ ಸರ್ಕಾರ ಕೈಗೊಳ್ಳುತ್ತಿರುವ ಸುಲಿಗೆ ಕ್ರಮಗಳ ಕುರಿತು ಶೀಘ್ರದಲ್ಲೇ ಒಂದು ಸಂಪೂರ್ಣ ಪುಸ್ತಕವನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಘೋಷಿಸಿದರು.
ದೀಪಾವಳಿ ಮತ್ತು ಜಿಎಸ್ಟಿ ಕಡಿತದ ಸಂತೋಷ:
ಇದೇ ವೇಳೆ, ದೀಪಾವಳಿ ಹಬ್ಬದ ಶುಭಾಶಯ ಕೋರಿದ ಸೋಮಣ್ಣ, ಜಿಎಸ್ಟಿ ಕಡಿತದಿಂದ ಜನರಿಗೆ ದೊರೆಯುತ್ತಿರುವ ಪ್ರಯೋಜನಗಳ ಕುರಿತು ಸಂತೋಷ ವ್ಯಕ್ತಪಡಿಸಿದರು. "ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು 299 ಪದಾರ್ಥಗಳ ಮೇಲೆ ಜಿಎಸ್ಟಿ ಕಡಿತ ಮಾಡುವ ಮೂಲಕ ಜನಸಾಮಾನ್ಯರಿಗೆ ದೀಪಾವಳಿಯ ಸಿಹಿ ಸುದ್ದಿ ನೀಡಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಪ್ರಜೆಗೆ ನೀಡಲಾದ ನಿಜವಾದ ದೀಪಾವಳಿ ಉಡುಗೊರೆ," ಎಂದರು.
ಬಿಜೆಪಿ ಹೋರಾಟ ಮುಂದುವರಿಕೆ:
"ರಾಜ್ಯದಲ್ಲಿ ವಿಪಕ್ಷಗಳ ಹೋರಾಟ ನಡೆಯುತ್ತಿದೆ. ನಾನು ಹಿರಿಯ ನಾಯಕರ ಮಾರ್ಗದರ್ಶನದಂತೆ ಕೆಲಸ ಮುಂದುವರಿಸುತ್ತಿದ್ದೇನೆ," ಎಂದು ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ ಅವರು, "ಜನರ ಸಮಸ್ಯೆಗಳ ಪರಿಹಾರ, ರಾಜ್ಯದ ಅಭಿವೃದ್ಧಿ ಮತ್ತು ನೈತಿಕ ರಾಜಕಾರಣವೇ ನಮ್ಮ ಆದ್ಯತೆ," ಎಂದು ಹೇಳಿ ಮಾತು ಮುಗಿಸಿದರು.

.jpg)
0 Comments