ಸುಳ್ಯ: ಕಸಬಾ ಗ್ರಾಮದ ಅಂಬಡೆಡ್ಕದಲ್ಲಿ 'ತತ್ವಮಸಿ ಚಾರಿಟೇಬಲ್ ಟ್ರಸ್ಟ್' ಮತ್ತು 'ತತ್ವಮಸಿ ಎಂಟರ್ಪ್ರೈಸಸ್' ಹೆಸರಿನಲ್ಲಿ ಬೆನಿಫಿಟ್ ಸ್ಕೀಂ ಆರಂಭಿಸಿ, ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದ್ದು, ಸುಳ್ಯ ನ್ಯಾಯಾಲಯವು ಅವರಿಗೆ ಶಿಕ್ಷೆ ವಿಧಿಸಿದೆ. ಏಜೆಂಟರ ಮೂಲಕ 4115 ಸದಸ್ಯರನ್ನು ಸೇರಿಸಿಕೊಂಡು ಅವರಿಂದ ಕಂತುಗಳ ರೂಪದಲ್ಲಿ ಹಣ ಸಂಗ್ರಹಿಸಲಾಗಿತ್ತು. ಆದರೆ, ಹಣವನ್ನಾಗಲಿ ಅಥವಾ ಯಾವುದೇ ವಸ್ತುವನ್ನಾಗಲಿ ನೀಡದೆ ಒಟ್ಟು 3,08,62,500 ರೂ. ವಂಚನೆ ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.
ಈ ವಂಚನೆಗೆ ಸಂಬಂಧಿಸಿದಂತೆ ಶಿವಪ್ರಕಾಶ್, ಕೆ.ಪಿ. ಗಣೇಶ್, ಕೆ.ಪಿ. ಕೃಷ್ಣಪ್ಪ ಗೌಡ ಸೇರಿದಂತೆ ಒಟ್ಟು ಎಂಟು ಮಂದಿ ಆರೋಪಿಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಠಾಣಾಧಿಕಾರಿ ಬ್ರಿಜೇಶ್ ಮಥ್ಯೂ ಭಾಗಶಃ ತನಿಖೆ ನಡೆಸಿ, ಚಂದ್ರಶೇಖರ್ ಎಚ್.ವಿ. ಅವರು ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಧೀಶರಾದ ಬಿ. ಮೋಹನ್ ಬಾಬು ಅವರ ಸಮಕ್ಷಮ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಅಂತಿಮ ತೀರ್ಪು ಅಕ್ಟೋಬರ್ 30 ರಂದು ಪ್ರಕಟಗೊಂಡಿದೆ.
ಪ್ರಕರಣದ ವಿಚಾರಣೆಯ ನಂತರ, ಆರೋಪಿಗಳಾದ ಕೆ.ಪಿ. ಗಣೇಶ್, ಗೀತಾ ಮತ್ತು ಭಾರತಿ ಅವರ ಅಪರಾಧವು ಸಾಬೀತಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಈ ಮೂವರು ಆರೋಪಿಗಳಿಗೆ ಕಲಂ 406 ಸಹವಾಚಕ 149 ರಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹ ವಾಸ ಮತ್ತು ₹10,000 ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ. ದಂಡ ಕಟ್ಟಲು ತಪ್ಪಿದಲ್ಲಿ, ಹೆಚ್ಚುವರಿಯಾಗಿ 6 ತಿಂಗಳ ಸಾದಾ ಕಾರಾಗೃಹ ವಾಸವನ್ನು ಅನುಭವಿಸಬೇಕಾಗುತ್ತದೆ. ಈ ಎಲ್ಲಾ ಶಿಕ್ಷೆಗಳನ್ನು ಏಕಕಾಲಕ್ಕೆ ಜಾರಿಗೊಳಿಸಲು ನ್ಯಾಯಾಲಯ ಆದೇಶಿಸಿದೆ.

0 Comments